Kagga Logo

Who is a fool?

299

303

299

ಹಟವಾದಕೆಡೆಯೆಲ್ಲಿ ಮನುಜಪ್ರಪಂಚದಲಿ? ।
ಸಟೆಯೆಷ್ಟೊ ದಿಟವೆಷ್ಟೊ ಬೆರೆತಿರುವುವಿಲ್ಲಿ ॥
ಪಟುವಾಗಿ ನಿಲಲಹುದೆ ಮಣಲೊಳೆಸಗಿದ ಗೋಡೆ? ।
ಕಟುತೆ ಸಲ್ಲದು ಜಗಕೆ- ಮಂಕುತಿಮ್ಮ ॥ ೨೯೯ ॥

ಖಂಡಿತವಾದಕ್ಕೆ ಅಥವಾ ಹಟವಾದಕ್ಕೆ ಈ ಜಗತ್ತಿನಲ್ಲಿ ಸ್ಥಾನವಿಲ್ಲ.ಏಕೆಂದರೆ ಈ ಜಗತ್ತಿನಲ್ಲಿ ನಿಜ ಮತ್ತು ಸುಳ್ಳು ಸಮಾನ ಪ್ರಮಾಣದಲ್ಲಿ ಬೆರೆತಿದೆ. ಹೀಗೆ ಸುಳ್ಳು ಸತ್ಯಗಳ ಸಂಮಿಶ್ರಣದಿಂದ ಆದ ಈ ಜಗತ್ತು ಹೇಗಿದೆಯೆಂದರೆ ಮರಳಲ್ಲಿ ಕಟ್ಟಿದ ಗೋಡೆಯಂತಿದೆ.ಹಾಗಾಗಿ ಜಗತ್ತಿನಲ್ಲಿ " ಇದು ಹೀಗೇ ಇರಬೇಕು ಎಂದಾಗಲೀ ಅಥವಾ ಇದು ಹೀಗೇ ಆಗಬೇಕು’ ಎಂಬ ಕಟುತ್ವ ಇರಬಾರದು ಎಂದು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

300

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ ।
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ॥
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ ।
ಬಿಡಿಗಾಸು ಹೂವಳಗೆ- ಮಂಕುತಿಮ್ಮ ॥ ೩೦೦ ॥

ಗಿಡದಲ್ಲಿ ಅರಳಿದ ಹೂ ಕಂಡು ನಿಸರ್ಗ ಪ್ರೇಮಿ ಸಂತಸಪಡುತ್ತಾನೆ. ಅದೇ ಹೂವನ್ನು ತನ್ನ ಮಡದಿಯ ತುರುಬಿನಲ್ಲಿ ಕಂಡು ಆನಂದಿಸುತ್ತಾನೆ ರಸಿಕ ಯುವಕ. ಆ ಹೂವನ್ನು ದೇವಾಲಯದಲ್ಲಿ ದೇವರ ಪಾದಕ್ಕೆ ಭಕ್ತಿಯಿಂದ ಸಮರ್ಪಿಸಿ ಶ್ರದ್ಧೆಯಿಂದ ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತಾನೆ ಭಕ್ತ. ಆದರೆ ಯಾರು ಹೇಗೆ ಉಪಯೋಗಿಸಿಕೊಂಡರೂ ಆ ಹೂವನ್ನು ಮಾರುವವನಿಗೆ ಅದು ಮಾರಾಟವಾಗಿ ಅವನಿಗೆ ಕಾಸು ಬಂದರೆ ತೃಪ್ತಿ ಎಂದು ಸಾಮಾನ್ಯ ಬದುಕಿನ ಒಂದು ಸತ್ಯವನ್ನು ವಿಮರ್ಶಿಸಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

301

ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ ।
ಹುಲ್ಲು ಬಯಲೊಂದೆಡೆಯಿನೊಂದಕ್ಕೆ ನೆಗೆದು ॥
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ- ।
ಡೆಲ್ಲಿಯೋ ಸುಖ ನಿನಗೆ ? - ಮಂಕುತಿಮ್ಮ ॥ ೩೦೧ ॥

ಒಂದು ವಿಶಾಲವಾದ ಹುಲ್ಲ ಬಯಲಲ್ಲಿ,ಒಂದು ಆಕಳ ಕರು ಚಂಗು ಚಂಗೆಂದು ನೆಗೆಯುತ್ತಾ ‘ ಒಳ್ಳೆಯ ಹುಲ್ಲು ಇಲ್ಲಿದೆ, ಆಲ್ಲಿ ಚೆನ್ನಾಗಿದೆ ಅಥವಾ ಇನ್ನೂ ಎಲ್ಲೋ ಚೆನ್ನಾಗಿರಬಹುದು" ಎಂದು ಯೋಚಿಸಿ, ಎಲ್ಲ ಕಡೆ ಓಡಿ, ಕಡೆಗೆ ಎಲ್ಲಿಯೂ ಮೆಲ್ಲದೆಯೇ ಓಡಿ ಓಡಿ ದಣಿವಂತೆ ಇದೆ ನಿನ್ನ ಪರಿಸ್ತಿತಿ. ಈ ವಸ್ತುವಿನಲ್ಲಿ ಸುಖವಿದೆ, ಆ ವಸ್ತುವಿನಲ್ಲಿ ಆನಂದವಿದೆ ಅಥವಾ ನಾ ಹುಡುಕುವ ಸುಖ ಮತ್ತು ಆನಂದ ಬೇರೆ ಯಾವ ವಸ್ತುವಿನಲ್ಲಿದೆಯೋ ಎಂದು ವಸ್ತುವಿನಿಂದ ವಸ್ತುವಿಗೆ ಮತ್ತು ವಿಷಯದಿಂದ ವಿಷಯಕ್ಕೆ ನೆಗೆ – ನೆಗೆದು ನೀ ದಣಿಯುತ್ತಿದ್ದೀಯಲ್ಲ, ನಿನಗಾವುದರೊಳಗೆ ಸುಖ ? ಎಂದು ಸುಖದಾಸೆಯ ಭ್ರಮೆಯಲ್ಲಿ ಸುತ್ತುವ ನಮ್ಮನ್ನು ಒಂದು ಪ್ರಶ್ನೆಯನ್ನು ಕೇಳಿದ್ದಾರೆ ಮಾನ್ಯ ಗುಂಡಪ್ಪನವರು.

302

ಹೊತ್ತು ಕಣಕಣದಿ ಮಣ್ಣನು ಗೆದ್ದಲಿರುವೆಗಳು ।
ಮೆತ್ತುತೆಡೆಬಿಡದೆ ದುಡಿದಾಗಿಸಿದ ಗೂಡು ॥
ಹುತ್ತವಾಗುವುದು ವಿಷಸರ್ಪಕ್ಕೆ; ಮಾನವನ ।
ಯತ್ನಗಳ ಕಥೆಯಿಷ್ಟೆ - ಮಂಕುತಿಮ್ಮ ॥ ೩೦೨ ॥

ಇರುವೆಗಳು ಮಣ್ಣ ಕಣ ಕಣವನ್ನು ನಿರಂತರವಾಗಿ ಹೊತ್ತು ತಂದು ಬಹಳ ಶ್ರಮ ಪಟ್ಟು ಗೂಡನ್ನು ಕಟ್ಟುತ್ತವೆ. ಆದರೆ ಅದರೊಳಕ್ಕೆ ಒಂದು ಹಾವು ಬಂದು ವಾಸಿಸುತ್ತದೆ. ಇರುವೆಗಳ ಶ್ರಮ ಅವುಗಳಮಟ್ಟಿಗೆ ಸಂಪೂರ್ಣ ವ್ಯರ್ಥವಾಗುತ್ತದೆ. ಹಾಗೆಯೇ ಮನುಷ್ಯರು ನಿರಂತರ ಶ್ರಮಪಟ್ಟು ಕೆಲಸಮಾಡಿ ಆ ಕೆಲಸದ ಫಲವನ್ನು ಪರರು ಕಸಿದುಕೊಂಡು ಬಿಡುತ್ತಾರೆ ಎಂದು ಒಂದು ಜಗತ್ಸತ್ಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

303

ಅಪ್ಪಾಲೆ ತಿಪ್ಪಾಲೆ ತಿರುಗಿಬಿದ್ದವನೊಬ್ಬ ।
ಸ್ವಪ್ನಲೋಕದಿ ತಿರೆಯ ಮರೆತಾತನೊಬ್ಬ ॥
ತಪ್ಪುಸರಿಗಳ ತೂಕವಳೆಯೆ ಕುಳಿತವನೊಬ್ಬ ।
ಬೆಪ್ಪನಾರ್ ಮೂವರಲಿ ? - ಮಂಕುತಿಮ್ಮ ॥ ೩೦೩ ॥

ಆ ಚಿಕ್ಕ ಮಕ್ಕಳು ‘ ಅಪ್ಪಾಲೆತಿಪ್ಪಾಲೆ ‘ ಆಡುವಾಗ ತಲೆ ಸುತ್ತಿದಂತಾಗುತ್ತದೆ. ಹಾಗೆ ಈ ಬದುಕಿನಲ್ಲಿ ತಿರುಗಿ ತಿರುಗಿ ತಲೆ ಸುತ್ತಿ ಭ್ರಮೆ ಹಿಡಿದು ಕುಳಿತಂತವನು ಒಬ್ಬ, ತಾನು ತಿರಿದು ತಂದ ಭಿಕ್ಷೆಯನ್ನುಕನಸು ಕಾಣುತ್ತಾ ಕಾಲಲ್ಲಿ ಒದ್ದು, ಇದ್ದದ್ದನ್ನೂ ಕಳೆದುಕೊಂಡ ‘ ತಿರುಕನೋರ್ವನೂರಮುಂದೆ ‘ ಎನ್ನುವ ಪದ್ಯದಲ್ಲಿ ಬರುವ ತಿರುಕನೊಬ್ಬ, ಮತ್ತು ಸದಾ ಕಾಲ ಅನ್ಯರ ತಪ್ಪುಸರಿಗಳ ಎಣಿಕೆಹಾಕುತ್ತಾ ಕೂರುವವನೊಬ್ಬ. ಈ ಮೂವರಲ್ಲಿ ಬೆಪ್ಪನಾರು ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.