Mankuthimmana Kagga

Sight Depends on the Eyes

329-333

329

ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ ।
ಕಳೆವುವದರಲಿ ನಮ್ಮ ಜನುಮಜನುಮಗಳು ॥
ಗೆಲವಾರ್ಗೊ! ಸೋಲಾರ್ಗೊ! ಲೆಕ್ಕನೋಡುವುದೆಂದೊ! ।
ಫಲವು ಬರಿಯಾಟವೆಲೊ — ಮಂಕುತಿಮ್ಮ ॥

ನಿರಂತರವಾಗಿ ನಡೆಯುವುದು ಜನ್ಮ ಜನ್ಮಾಂತರದ ನಮ್ಮ ಬದುಕಿನ ಆಟ. ಈ ಆಟದಲ್ಲಿ ಗೆದ್ದವರು ಯಾರೋ, ಸೋತವರು ಯಾರೋ ಎಂದು ಲೆಕ್ಕವನ್ನು ನೋಡುವುದು ಯಾವ ಕಾಲಕ್ಕೋ ಎಂದು ಯಾರಿಗೂ ಅರಿವಿಲ್ಲ. ಆದ್ದರಿಂದ ನಮ್ಮ ಬದುಕಿಗೆ ಫಲವೆಂದರೆ, ಬರೀ ಬಾಳಿನಾಟ ಅಡುವುದಷ್ಟೇ ಅಲ್ಲದೆ ಬೇರೇನೂ ಅಲ್ಲ ಎಂದು ಬದುಕಿನ ಲೆಕ್ಕಾಚಾರಗಳ ಮತ್ತು ಫಲಾಫಲಗಳ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

This beginningless, endless game continues without a break. Life after life is spent in that. Who is the winner? Who is the loser? When to take account? The fruit is the play itself.

330

ಆಟಕ್ಕೆ ಫಲವೇನು? ಕುತುಕದ ರುಚಿಯೆ ಫಲ ।
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ? ॥
ಏಟಾಯ್ತೆ ಗೆಲವಾಯ್ತೆಯೆಂದು ಕೇಳುವುದೇನು? ।
ಆಟದೋಟವೆ ಲಾಭ — ಮಂಕುತಿಮ್ಮ ॥

ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಮತ್ತೆ ಇಸ್ಪೀಟಿನ ಆಟದ ಉದಾಹರಣೆಯನ್ನು ನೀಡಿ, ನಮ್ಮ ಬಾಳಿನ ಆಟವೂ ಅದೇ ರೀತಿ ಎಂದು ಹೇಳುತ್ತಾರೆ. ಇಸ್ಪೀಟಿನ ಆಟದಲ್ಲಿ ಸರಿಯಾದ ಎಲೆ ಬಿದ್ದರೆ ಆಟ ಮುಂದುವರೆಯುವುದು.
ಹಾಗಾಗಿ, ಇಲ್ಲಿ ಗೆದ್ದೆವೋ, ಸೋತೆವೋ ಎಂದು ಕೇಳುವುದದೇನು,ಆಟವಾಡಿದ್ದಷ್ಟೇ ಲಾಭವಲ್ಲವೇ? ಹಾಗೆಯೇ ‘ಜೀವನದಾಟದಲ್ಲಿ ಏಟಾಯ್ತೆ ಗೆಲುವಾಯ್ತೆಂದೆಂದು ಕೇಳುವುದದೇನು’ ಎಂದು ಹೇಳುತ್ತಾ, ಇಲ್ಲಿ ಬದುಕಿದ್ದೆ ಲಾಭವೆಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು.

What is the benefit of play? The eager participation in it. If we don't get the card we want, will the game continue? Why ask whether you won or lost? Playing the game is itself the reward.

331

ಸತ್ಯ ಶಿವ ಸುಂದರದ ಸಚ್ಚಿದಾನಂದನದ ।
ಭಿತ್ತಿಯಲಿ ಬಣ್ಣಬಣ್ಣದ ಜೀವಚಿತ್ರ ॥
ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ ।
ವೃತ್ತಿ ತನ್ಮಯವಹುದೊ — ಮಂಕುತಿಮ್ಮ ॥

ಜಗತ್ತಿನ ಸೃಷ್ಟಿಯ ಚಿತ್ರ, ಸತ್ಯವಾಗಿಯೂ ಮಂಗಳಕರವಾಗಿಯೂ,ಸುಂದರವಾಗಿಯೂ ಇದ್ದು, ಸಚ್ಚಿದಾನಂದ ಸ್ವರೂಪದಿಂದಿದೆ. ಪ್ರತಿ ನಿತ್ಯ ನೀನು ಅಂತಹ ಚಿತ್ರದಲ್ಲಿ ನಿನ್ನ ಚಿತ್ತವನು ಇರಿಸಿದರೆ ನೀ ಮಾಡುವ ಕೆಲಸ ತನ್ಮಯತೆಯಿಂದ ಕೂಡಿರುತ್ತದೆ ಎಂದು ನಾವು, ಈ ಪರಮಾತ್ಮನ ಸೃಷ್ಟಿಯಲ್ಲಿ ಏನನ್ನು ಮತ್ತು ಜಗಚ್ಚಿತ್ರವನ್ನು ಹೇಗೆ ಕಾಣಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

The wall of truth-goodness-beauty and existence-awareness-bliss is adorned by colorful pictures of life. Constantly remember it, put your mind on the picture. You'll be absorbed in your work.

332

ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ ।
ಸುತ್ತ ನೀನನುಭವಿಪ ಬಾಹ್ಯ ಚಿತ್ರದೊಳೋ ॥
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ ।
ತತ್ತ್ವದರ್ಶನವಹುದು — ಮಂಕುತಿಮ್ಮ ॥

ಸತ್ಯವೆಂಬುದು ಎಲ್ಲಿದೆ? ನಿನ್ನ ಅಂತರಂಗದಲ್ಲೋ ಅಥವಾ ನೀ ಇದ್ದು ಅನುಭವಿಸುತ್ತಿರುವ ಈ ಬಾಹ್ಯ ಪ್ರಪಂಚದಲ್ಲೋ? ಯುಕ್ತಿಯಿಂದ ಒಂದನು ಒಂದಕ್ಕೆ ಸರಿಹೊಂದಿಸಿ ನೋಡಿದರೆ ನಮಗೆ ತತ್ವದರ್ಶನವಾಗುವುದು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Where is truth? Is it in your heart or in the image that you experience in your surroundings? Artfully link one with the other and look again. The truth will be revealed to you.

333

ಸತ್ಯಾನುಭವವೆಲ್ಲರಿಂಗಮೊಂದೆಂತಹುದು? ।
ಬೆಟ್ಟದಡಿಯೊಳಗೊಬ್ಬ; ಕೋಡಬಳಿಯೊಬ್ಬ ॥
ಎತ್ತರದ ದೃಶ್ಯ ಕಣಿವೆಯೊಳಿಹನಿಗಾದೀತೆ? ।
ನೇತ್ರದಂದದೆ ನೋಟ — ಮಂಕುತಿಮ್ಮ ॥

ಸತ್ಯದ, ಎಂದರೆ ಪರಮಾತ್ಮನ ಅನುಭವ ಎಲ್ಲರಿಗೂ ಒಂದೇ ರೀತಿಯಲ್ಲಿ ಆಗುವುದು ಹೇಗೆ ಸಾಧ್ಯ? ಬೆಟ್ಟದಡಿ ಒಬ್ಬ ನಿಂತರೆ ಅವನಿಗೆ ಬೆಟ್ಟದ ಬುಡ ಮಾತ್ರ ಕಾಣುತ್ತದೆ. ಬೆಟ್ಟದ ತುತ್ತ ತುದಿಯಲ್ಲಿ ನಿಂತವನಿಗೆ ತುದಿ ಮಾತ್ರ ಕಾಣುತ್ತದೆ. ಕಣಿವೆಯಲ್ಲಿ ನಿಂತವಗೆ ಎತ್ತರದ ದೃಶ್ಯ ಕಾಣುತ್ತದೆಯೇ? ನಮಗೆ ನೋಡಲು ಕ್ಷಮತೆ ಎಷ್ಟಿದೆಯೋ ಅಷ್ಟು ಮಾತ್ರ ನೋಟ ಸಿಗುತ್ತದೆ. ಹೀಗೆ ಈ ಜಗತ್ತನ್ನು ನೋಡುವ ಮತ್ತು ಆ ಸೃಷ್ಟಿಕರ್ತನನ್ನು ಮತ್ತು ಅವನ ಸೃಷ್ಟಿಯನ್ನು ನೋಡುವ ಮತ್ತು ಅರ್ಥಮಾಡಿಕೊಳ್ಳುವ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

How can the experience of truth be the same for all? One is at the foothills, one is at the peak. Will the view from the top be like the view from the valley? Sight depends on the eyes.