Mankuthimmana Kagga

Inanimate, Animate

109-113

109

ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ ।
ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ॥
ಚಲಿಸದೆನಿಸಿದ ಜಡವನಾವ ಗಾಳಿಯೊ ಸೋಕೆ ।
ಬಲ ತೀವಿ ಚಲಿಪುದದು — ಮಂಕುತಿಮ್ಮ ॥

ಶಾಪಗ್ರಸ್ತಳಾಗಿ, ಕಲ್ಲಾಗಿ ನಿದ್ರಿಸುತ್ತಿದ್ದ ಋಷಿಯ ಪತ್ನಿ ಅಹಲ್ಯೆ, ರಾಮನ ಪದ ಸೋಕಿ ಜೀವಂತವಾದಂತೆ, ಇದು ಚಲಿಸದು, ಇದು ಜಡ ಎಂದು ಯಾವುದು ಕರೆಯಲ್ಪಡುತ್ತದೋ ಅದು ಸತ್ವದ, ಚೈತನ್ಯದ, ಜೀವ ಶಕ್ತಿಯ ಸಂಸರ್ಗದಿಂದ, ಶಕ್ತಿಯನ್ನು ಪಡೆದು ಜೀವಂತವಾಗುತ್ತದೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Asleep in the form of a statue, the woman arose with a mere touch of Rama's toe. So also an inert, immovable object moves when the wind acts on it with force.

110

ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು? ।
ಕ್ರಿಮಿಗೆ ಹಸಿವುಂಟಿನಿತು ಬೆದಕಾಟವುಂಟು ॥
ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ ।
ಕ್ರಿಮಿಪಂಕ್ತಿ ಕಿರಿದಹುದೆ? — ಮಂಕುತಿಮ್ಮ ॥

ಹಿಮಾಲಯ ಪರ್ವತವನ್ನು ಕಂಡವನಿಗೆ ಒಂದು ಸಣ್ಣ ಕ್ರಿಮಿ ಯಾವ ಲೆಕ್ಕ? ಆದರೆ ಕ್ರಿಮಿಗೆ ಸಂತತಿ ಉಂಟು, ಹಸಿವುಂಟು, ಬೆದಕಾಟವುಂಟು. ಹಿಮಾಲಯವು ಎಂದಿನಿಂದ ಇದೆಯೋ ಅಂದಿನಿಂದ ಕ್ರಿಮಿಯ ಅನಂತ ಸಂತತಿಯೂ ಉಂಟು. ಕ್ರಿಮಿಗಳು ಎಷ್ಟಿವೆಯೆಂದರೆ ಕ್ರಿಮಿ ಸಂತತಿಯನ್ನು ಒಟ್ಟು ಮಾಡಿದರೆ , ಅದು ಹಿಮಾಲಯಕ್ಕಿಂತ ದೊಡ್ಡದಾಗಬಹುದು. ಹಾಗಾಗಿ ಕ್ರಿಮಿ ಪಂಕ್ತಿ ಕಿರಿಯದಲ್ಲವೆಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

For one who has seen the Himalayas, what is the greatness of a worm? But the worm is hungry, it keeps searching, and it has a never-ending lineage. The Himalayas are lifeless. Is the life of the worm small?

111

ಜಡವೆಂಬುದೇನು? ಸೃಷ್ಟಿಯಲಿ ಚೇತನ ಸುಪ್ತಿ ।
ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿ ॥
ಮಿಡಿಯೆ ಪರಸತ್ತ್ವ ವಿದ್ಯುದ್ದೀಪ್ತಿಯದನಾಗ ।
ನೆಡೆವುದದು ಜೀವಿವೊಲು — ಮಂಕುತಿಮ್ಮ ॥

ಒಂದೇ ಮೂಲದಿಂದ ಹೊರಟ ಎರಡು ವಸ್ತುಗಳು. ಒಂದು ಜಡ ಇನ್ನೊಂದು ಚೇತನ. ಅದರ ಅಸ್ಥಿತ್ವಕ್ಕೆ ಕಾರಣವೇ ಬೃಹಚ್ಚೇತನ. ಸೃಷ್ಟಿಯ ಆದಿಯಲ್ಲಿ ಆ ಚೇತನದ ವ್ಯಾಪಕತೆಯ ಸ್ವರೂಪವೇ ಬೇರೆ. ಕೋಟ್ಯಾಂತರ ವರ್ಷಗಳಿಂದ ಬದಲಾಗುತ್ತಾ ಬರುತ್ತಿದೆ. ಮೊದಲು ಪಂಚಭೂತಗಳಲ್ಲಿ ಮಾತ್ರ ಇದ್ದದ್ದು ಕಾಲಾನುಕಾಲಕ್ಕೆ ಗಿಡಮರಗಳಲ್ಲಿ ತದನಂತರ ಕ್ರಿಮಿ ಕೀಟಗಳಲ್ಲಿ, ನಂತರ ಪ್ರಾಣಿಗಳಲ್ಲಿ ಹೀಗೆ ಎಲ್ಲದರ ಅಸ್ಥಿತ್ವಕ್ಕೆ ಕಾರಣವಾದ ಚೇತನವು ತನ್ನ ಶರೀರವನ್ನು ರೂಪಾಂತರಗೊಳಿಸುತ್ತಾ ಹೋಯಿತು. ” ಅಕಾಶಾದ್ವಾಯು: ವಾಯೋರಗ್ನಿ: ಅಗ್ನೇರಾಪಃ ಅದ್ಭ್ಯಃ ಪೃಥಿವೀ ಪೃತಿವ್ಯಾ ಓಷದಯಃ ಒಷದೀಭ್ಯೋನ್ನಂ ಅನ್ನಾತ್ ಪುರುಷಃ ” ಹೀಗೆ ಚೇತನವು ತನ್ನ ಇರುವಿಕೆಯನ್ನು ಎಲ್ಲೆಡೆ ತೋರಿಸುತ್ತಾ ಜೀವಗಳಲ್ಲಿ ಚೇತನ ಸ್ವರೂಪದಿಂದ ” ಪುರುಷ” ನೆಂದು ಕರೆಯಲ್ಪಡುತ್ತಾ ಪೌರುಷದಿಂದ ಮೆರೆದಿದೆ.ಈ ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿದಂತೆ “ಜಡ” ವೆಂದರೆ ಚಲನೆ ಇಲ್ಲದ ವಸ್ತು. ಅದರಲ್ಲಿಯೂ ಚೈತನ್ಯವಿದೆ. ಆದರೆ ಆ ಚೈತನ್ಯಾಗ್ನಿ ನಿದ್ರಿಸುತ್ತಿದೆ ಎಂದರೆ ಸುಪ್ತವಾಗಿದೆ. ನಿದ್ರಿಸುತ್ತಿರುವ ಆ ಅಗ್ನಿಯ ಕಿಡಿ ಸಿಡಿದು ಮಿಡುಕಿದರೆ ಅದು ಜೀವಿಯಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

What is inanimate? In creation, when consciousness is asleep and restrained, the fire of awareness lies hidden within. If divine power kindles a spark of electricity it walks like the animate.

112

ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿಕಣ ।
ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ॥
ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು ।
ನಮಗೊಂದು ವೇದನಿಧಿ — ಮಂಕುತಿಮ್ಮ ॥

ಬೃಹತ್ತಾದ ಹಿಮಾಲಯ ಪರ್ವತದ ಗರ್ಭದಲ್ಲೂ ಸಹ ಒಂದು ಚೈತನ್ಯದ ಅಗ್ನಿ ಅಡಗಿದೆ. ಅದು ಸ್ಥಿರವಾಗಿ, ಸ್ಥಿಮಿತದಿಂದ, ನಿಂತಿದೆ. ಈ ಭೂಮಿಯನ್ನು ಕಾಪಾಡುವುದಕ್ಕಾಗಿಯೇ!! ಶಾಂತ, ಸುಂದರ ಮತ್ತು ಸಾತ್ವಿಕ ಗಾಂಭೀರ್ಯದ ನಿಲುವಿನಲ್ಲಿ ನಿಂತಿರುವ ಆ ಹಿಮಾಲಯವು ನಮಗೆ ಜ್ಞಾನದ ಪ್ರತೀಕವಾಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

A fragment of the fire of awareness lies hidden in the Himalayas. It stands firmly for the earth's well-being. Filled with the majesty of peace, beauty, and goodness, it is a treasure of knowledge for us.

113

ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ ।
ಗುಣಿಸುವನು ಭೂತಶಕ್ತಿಗಳನದರಿಂದೇಂ? ॥
ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ತ್ವ ।
ವಣಗಿಹುದು ಮೂಲವದು — ಮಂಕುತಿಮ್ಮ ॥

ಈ ಜಗತ್ತಿನ ಅತಿ ಸೂಕ್ಷ್ಮ ಜೀವಿ ಅಣುಗಳನ್ನು ವಿಜ್ಞಾನಿ ಲೆಕ್ಕ ಹಾಕಿಬಿಡಬಹುದು. ಭೌತಿಕ ಶಕ್ತಿಯನ್ನು ಗುಣಿಸಿ ಭಾಗಿಸಿ ಲೆಕ್ಕಹಾಕಿಬಿಡಬಹುದು. ಆದರೆ ಅದರಿಂದ ಏನು ಪ್ರಯೋಜನ. ಕೇವಲ ಭೌತಿಕ ರೂಪವಷ್ಟೇ ತಿಳಿಯುವುದು. ಈ ಗಣಿತ ಶಾಸ್ತ್ರಕ್ಕೂ ಮೀರಿ ಒಂದು ಮಹತತ್ವವು ಭೌತಿಕ ಶರೀರದೊಳಗೆ ಚೈತನ್ಯ ರೂಪದಲಿ ಅಡಗಿದೆ. ಅದೇ ಮೂಲ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

A scientist counts the number of atoms in the universe, calculates the energy of the physical world —so what? Beyond what can be scientifically known, an inestimable truth lies hidden. That is the fundamental.