Mankuthimmana Kagga

Brahman-Chameleon

34-38

34

ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳಸುವೀ ।
ಸೃಷ್ಟಿಯಲಿ ತತ್ತ್ವವೆಲ್ಲಿಯೋ ಬೆದಕಿ ನರನು ॥
ಕಷ್ಟಪಡುತಿರಲೆನುವುದೋ ಬ್ರಹ್ಮವಿಧಿಯೇನೋ! ।
ಅಷ್ಟೆ ನಮ್ಮಯ ಪಾಡು? — ಮಂಕುತಿಮ್ಮ ॥

ಈ ಜಗದ್ಸೃಷ್ಟಿಯ ಬಗ್ಗೆ ಎಷ್ಟು ಚಿ೦ತಿಸಿದರೂ ನಿವಾರಣೆಯಾಗದ ಅನುಮಾನಗಳು, ಸಂದೇಹಗಳು ಹಾಗೆ ಉಳಿದಿವೆ. ಈ ಸೃಷ್ಟಿಯ ರಹಸ್ಯವನ್ನು ಚೇಧಿಸುವುದಕ್ಕಾಗಿ, ತತ್ವಗಳ ಹುಡುಕಿ, ತಡಕಿ ಕಷ್ಟಪದುವುದೇ ಮಾನವರಿಗೆ ಆ ಪರಮಾತ್ಮ ಬರೆದ ಹಣೆಬರಹವೋ, ಇಷ್ಟೇಯೇ ನಮ್ಮ ಪಾಡು ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

The more we think, the more the doubts grow. Humans constantly struggle in the pursuit of reality in creation Perhaps we're meant to struggle thus. Has that been ordained for us?

35

ಇರಬಹುದು; ಚಿರಕಾಲ ಬೊಮ್ಮ ಚಿಂತಿಸಿ ದುಡಿದು ।
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ॥
ಅರಿತೆನಾನೆನ್ನುವಂತಾಗೆ ಕೃತಿ ಕೌಶಲದ ।
ಹಿರಿಮೆಗದು ಕುಂದಲ್ತೆ? — ಮಂಕುತಿಮ್ಮ ॥

ಬಹಳಕಾಲ ಯೋಚನೆ ಮಾಡಿ ಶ್ರಮಪಟ್ಟು ಆ ಪರಮಾತ್ಮ ಈ ಅದ್ಭುತವಾದ ಜಗತ್ತನ್ನು ನಿರ್ಮಿಸಿರುವಾಗ, ಕೆಲಕಾಲ ಬದುಕಿ ಸಾವನ್ನಪ್ಪುವ ಯಃಕಶ್ಚಿತ್ ಮಾನವನೆಂಬ ಪ್ರಾಣಿ ಇದರ ರಹಸ್ಯವನ್ನು ತಾನು ಅರಿತುಕೊಂಡು ಬಿಟ್ಟೆ ಎಂದರೆ , ತನ್ನ ಹಿರಿಮೆ, ಶ್ರಮ ಮತ್ತು ಕುಶಲತೆಗಳಿಗೆ ಕುಂದು ಅಥವಾ ಕಳಂಕ ಬಂದಂತೆ ಆಗುತ್ತದೆ ಎಂದು, ಆ ಪರಮಾತ್ಮ, ಆ ಜಗತ್ತಿನ ರಹಸ್ಯಗಳನ್ನು ಸಂಪೂರ್ಣವಾಗಿ ಮಾನವರು ಅರಿತುಕೊಳ್ಳುವ ಶಕ್ತಿಯನ್ನು ಕೊಡಲಿಲ್ಲವೋ ಏನೋ? ಎಂಬ ಕುಹಕವನ್ನಾಡುತ್ತಾರೆ, ಮಾನ್ಯ ಗುಂಡಪ್ಪನವರು.

Perhaps brahman thought for a long time and toiled to create the picturesque universe. If a mortal human claims to fathom it does it not degrade the greatness of this remarkable deed?

36

ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ ।
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಸಿ ॥
ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ ।
ಸೊಲ್ಲಿಪುದು ಸರಿಯೇನೋ? — ಮಂಕುತಿಮ್ಮ ॥

ಇಡೀ ಜಗತ್ತೇ ಒಂದು ಭ್ರಾಂತಿಯ ಉಂಡೆ. ಮಾನವರಿಗೆ ಯಾವುದೂ ಅರ್ಥವಾಗುವುದಿಲ್ಲ ಆದರೂ ಪ್ರಯತ್ನ ಮಾಡುತ್ತಾನೆ. ಅವನಿಗೆ ಅರಿವಿನ ಮಿತಿ ಉಂಟು. ಅಮಿತವಾದ ಜಗತ್ಸೃಷ್ಟಿಯ ರಹಸ್ಯವನ್ನು ಪರಿಮಿತ ಮತಿಯಿಂದ ಅರಿಯುವುದೆಂತು? . ಈ ಜಗತ್ತನ್ನು ತನ್ನ ಅಪರಿಮಿತ ಶಕ್ತಿಯಿಂದ ಅಗಾಧವಾಗಿ ಸೃಷ್ಟಿಸಿ, ಮಾನವರನ್ನು ಅಲ್ಪಮತಿಗಳನ್ನಾಗಿಸಿ, ಅವನು ಅರಿಯುವ ಪ್ರಯತ್ನದಲ್ಲಿ ಸೋತಾಗ, ಇವನು ಗೆಲ್ಲಲಿಲ್ಲ ಎಂದು ಹೇಳುವುದು ಆ ಪರಮಾತ್ಮನಿಗೆ ಸರಿಯೇ? ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Spreading attachments and illusions everywhere, and making you tread undesirable paths, is it fair for destiny to declare that you did not pass the test?

37

ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ ।
ಅವನ ವೇಷಗಳೇಕೆ ಮಾರ್ಪಡುತಲಿಹವು? ॥
ತವಕಪಡನೇತಕೋ ಕುರುಹ ತೋರಲು ನಮಗೆ ।
ಅವಿತುಕೊಂಡಿಹುದೇಕೋ? — ಮಂಕುತಿಮ್ಮ ॥

ಈ ಜಗತ್ತನ್ನು ಆ ಪರಮಾತ್ಮನೇ ಸೃಷ್ಟಿಮಾಡಿದ. ಈ ಜಗತಿನಲ್ಲಿರುವ ಎಲ್ಲವನ್ನೂ ಆ ಪರಮಾತ್ಮನೇ ಸೃಷ್ಟಿಮಾಡಿದ ಮತ್ತು ಎಲ್ಲದರಲ್ಲೂ ಅವನೇ ಇರುವನೆಂದು ತತ್ವಜ್ಞಾನಿಗಳು ಹೇಳುತ್ತಾರೆ. ಎಲ್ಲವೂ ಅವನ ರೂಪವೇ ಎಂದು ಹೇಳುತ್ತಾರೆ. ಹಾಗಾದರೆ ಎಲ್ಲದರಲ್ಲೂ ಅವನೇ ಅವತರಿಸಿದ್ದಾನೆ ಎಂದಾದರೆ, ಮತ್ತು ಪರಮಾತ್ಮ ನಿತ್ಯನೂ ಸತ್ಯನೂ ಅದಾಗ, ಈ ರೂಪಗಳ ಬದಲಾವಣೆ ಏಕೆ. ಎಲ್ಲ ರೂಪವೂ ಅವನೇ ಆದರೆ, ಅವನು ತನ್ನ ನಿಜ ರೂಪವನ್ನೇಕೆ ತೋರಿಸುವುದಿಲ್ಲ. ಏಕೆ ಅವಿತುಕೊಂಡಿದ್ದಾನೆ? ಎಂದು ಒಂದು ವಿಷಯವನ್ನು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು.

If brahman is present in all forms in the world, why do his forms change? Why isn't he eager to give us a clue? Why does he hide?

38

ಬೇರಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ ।
ತೋರಿಪೊಸರವಳ್ಳಿಯಂತೇನು ಬೊಮ್ಮಂ? ॥
ಪೂರ ಮೈದೋರೆನೆಂಬಾ ಕಪಟಿಯಂಶಾವ ।
ತಾರದಿಂದಾರ್ಗೇನು? — ಮಂಕುತಿಮ್ಮ ॥

ನಾವು ಈ ವರೆಗೆ ಹೇಳಿರುವುದೇನು ಎಂದು ಒಂದು ಬಾರಿ ನೋಡೋಣ. ಎಲ್ಲವೂ ಆ ಪರಮಾತ್ಮನಿಂದ ಆಗಿ ಅವನೇ ಎಲ್ಲ ರೂಪಗಳಲ್ಲಿಯೂ ಪ್ರಕಟವಾಗಿರುವ ಎಂದು ನಮ್ಮ ನಂಬಿಕೆ. ಈ ಪ್ರಪಂಚದಲ್ಲಿ ಇರುವ ಎಲ್ಲವೂ ಆ ಪರಮಾತ್ಮನೇ, ತನ್ನ ಅಂಶದಿಂದ ಪ್ರಕಟವಾಗಿ(ಸಿ)ದ್ದಾನೆ ಎಂದು. ಹಾಗಾಗಿ ಯಾರ್ಯಾರು ಏನೇನು ಎಂದು ಭಾವಿಸಿದರೆ ಹಾಗೆ ಅವರಿಗೆ ತೋರುವ ಆ ಪರಮಾತ್ಮ ವಸ್ತು ಏಕ ರೂಪದಲ್ಲಿ ಏಕೆ ಇಲ್ಲ ಎಂದು ಈ ಕಗ್ಗದ ಪ್ರತಾಪ. ಘಳಿಗೆ ಘಳಿಗೆಗೆ ಬದಲಾಗುವ ಮನುಷ್ಯರ ಮನದ ಭಾವಕ್ಕೆ ತಕ್ಕಂತೆ ಬದಲಾಗುವ ಆ ಪರಮಾತ್ಮ ಸ್ವರೂಪವನ್ನು ಗುಂಡಪ್ಪನವರು, ಊಸರವಲ್ಲಿಯಂತೆ ಕ್ಷಣಕ್ಕೊಂದು ರೂಪವನ್ನು ಏಕೆ ತೋರುತ್ತಾನೆ ಈ ಪರಮಾತ್ಮ. ಆಗಾಗ ಅವನೆತ್ತುವ ಅಂಶಾವತಾರಗಳಿಂದ ಯಾರಿಗೆ ಏನು ಪ್ರಯೋಜನ. ತನ್ನ ನಿಜ ರೂಪವನ್ನೇ ತೋರಬಹುದಲ್ಲ ಎಂದು, ಪ್ರತಾಪಿಸಿ, ಓದುಗರನ್ನು ಆ ಪರಮಾತ್ಮನ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುತ್ತಾರೆ.

The chameleon changes its body color every minute —is brahman like that? He isn't prepared to appear in his entirety. What's the use of this trickster's partial form?